ಹು(ದು)ಡುಗುಮನ
ಜೀವನವನ್ನು ಅರ್ಥೈಸಿಕೊಳ್ಳುವ ಹುಡುಗಾಟದಲ್ಲಿ....!!!!
ಸೋಮವಾರ ೨೩ ನವೆಂಬರ್ ೨೦೦೯
ಎಲ್ಲಾ ಪ್ರಚಾರವೂ ಒಳ್ಳೆಯದೇ!
ನನ್ನ ಅನಿಸಿಕೆಯನ್ನು ಖಂಡಿಸಿ ಪ್ರಿನ್ಸಟನ್ ವಿವಿಯ ಶಾಂತಾರಾಮ್ ವಿಜಯಕರ್ನಾಟಕದಲ್ಲಿ ಬರೆದಿದ್ದಾರೆ. ಇಷ್ಟು ಸಂತೋಷ ನನ್ನ ಲೇಖನ ಪ್ರಕಟ ಆದಾಗಲೂ ಆಗಿರಲಿಲ್ಲ!
ಶಾಂತಾರಾಂ ಅವರನ್ನು ಅವರ ನಿವೇಶದಲ್ಲೇ ತಿಂಗಳ ಹಿಂದೆ ನನನ್ನ ಸ್ನೇಹಿತರೊಂದಿಗೆ ಭೇಟಿಯಾಗಿದ್ದೆ. ಅವತ್ತು ಸಾಹಸಸಿಂಹ ವಿಷ್ಣುವರ್ಧನ ಜನುಮದಿನ.
"ನಾನೂ ಚಾಮರಾಜಪೇಟೆಯಲ್ಲಿ ಓದಿದವನು. ನಾನೂ ನಿಮ್ಮ ಸಾಹಸಸಿಂಹ ಕ್ಲಾಸ್ ಮೇಟುಗಳು. ಸಂಪತ ಕುಮಾರ ಅಂತ ಅವನ ಹೆಸರು. ಕಡೆಗೆ
ಓದು ಮುಗಿದ ಮೇಲೆ ಇಲ್ಲಿ ಬದುಕಲು ಜಾಗವಿಲ್ಲದೇ ಹೊಟ್ಟೆಪಾಡಿಗಾಗಿ ಅಮೇರಿಕೆಗೆ ತೆರಳಿದೆ" ಎಂದು ಮಾತಿಗಾರಂಭಿಸಿದರು.
ತಾತ್ವಿಕವಾಗಿ ನಾವು ವಿರೋಧಿಗಳಾದರೂ ವಯಕ್ತಿಕಮಟ್ಟದಲ್ಲಿ ಅವರ ತೋರಿದ ಸ್ನೇಹ ನನಗಿಷ್ಟವಾಯಿತು! ಮೊದಲು ಬಿಯರಗಾಗಿ ಆಹ್ವಾನಸಿದವರು ನಮಗೆ ಅಭ್ಯಾಸವಿಲ್ಲವೆಂದು ತಿಳಿದು
ಕಾಫಿಯಿಂದ ಆದರಿಸಿದರು.
ಪ್ರಸ್ತುತ ಲೇಖನ ಎರಡು ಮೂರು ತಿಂಗಳ ಹಿಂದೆಯೇ ಪ್ರಕಟವಾಗಬೇಕಿತ್ತು. ಭಟ್ಟರು ಈಗ ಕೃಪೆತೋರಿದರೆನಿಸುತ್ತದೆ! ಈ ಲೇಖನದ ಬಗ್ಗೆ ಹೇಳಿ ನಿಮ್ಮನ್ನು ಖಂಡಿಸಿದ್ದೇನೆ, ವ್ಯಂಗ್ಯವಾಡಿದ್ದೇನೆ ಎಂದರು. ಆದರೆ ಈ ಲೇಖನದಲ್ಲಿ ಒಂದು ಕಡೆ ಮಾತ್ರ ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆ.ಅದೂ ಜೆಫರಿ ಬಗ್ಗೆ ಹೇಳುವಾಗ. ನನ್ನೆದುರಿಗಿನ ಮಾತಿಗೂ ಲೇಖನಕ್ಕೂ ಸಂಪೂರ್ಣ ಸಾಮ್ಯಗಳಿವೆ. ಸೆರಾಲಿನಿ, ಜೆಫರಿ, ವಂದನಾಶಿವ, ನಾಗೇಶ ಹೆಗಡೆ ಇವರೆಲ್ಲ ಕಳ್ಳರು; ಇವರಿಗೇನು ತಿಳಿದಿದೆ ಎಂದು ಹಂಗಿಸಿದರು. ಬಿಟಿ ಹತ್ತಿಯ ಬಗ್ಗೆ ಅಧ್ಯಯನ ನಡೆಸಿದ ಝಕಾರಿಯಾ ಮತ್ತಿತರರ ಸಂಶೋಧನೆಯನ್ನು ಅಲ್ಲಗಳೆದು ಅವರೆಲ್ಲ ಯಾವುದೋ ಭ್ರಮೆಗೊಳಗಾಗಿದ್ದಾರೆ ಎಂದು ಜರಿದರು. ನಾನು ಗಮನಿಸಿದ ಒಂದು ಅಂಶವೆಂದರೆ ಇವರ ಪ್ರಕಾರ ಬಿಟಿ ಬಗ್ಗೆ ಮಾತಾಡಲು ಪಿಎಚ್.ಡಿ ಇದ್ದವರಿಗೆ ಮಾತ್ರ ಹಕ್ಕು ಇದೆ! ಕಣ್ಣೆದುರಿಗೆ ಕಂಡ ಸತ್ಯವನ್ನು ಹೇಳಿದರೂ ಅದು ಪಿಎಚ್.ಡಿ ಹೊಂದಿದವನು ಹೇಳಿದರೆ ಮಾತ್ರ ಸತ್ಯ! ಡಾಕ್ಟರೇಟ ಗಳನ್ನು ಬಿಟ್ಟು ಬೇರೆಯವರು ಬಿಟಿ ಬಗ್ಗೆ ಮಾತನಾಡಲು ಅರ್ಹರಲ್ಲ!
ಇನ್ನು Horizontal gene transfer ಎಂಬ ಮಾತೇ ಸುಳ್ಳು. gene transfer, ಪ್ರಕೃತಿಯಲ್ಲಿ ಲಕ್ಷಾಂತರ ವರ್ಷಗಳಿಂದ ನಡೆಯುತ್ತಿದೆ ಎಂಬ ವಾದ ಮುಂದಿಟ್ಟರು. ಅದೇನೋ ದಿಟ ಆದರೆ ಅಕ್ಕಿಯಿಂದ ಅಕ್ಕಿಗೆ ಜೋಳದಿಂದ ಜೋಳಕ್ಕೆ ಅಂದರೆ ಒಂದೇ ತಳಿಯ ಸಸ್ಯಗಳ ನಡುವೆ gene transfer ಆಗಿವೆಯೇ ಹೊರತು ಇವರು ಮಾಡಿರುವಂತೆ ಣಿಗಳ,ಬ್ಯಾಕ್ಟೀರಿಯಾಗಳ ನಡುವೆ ಮತ್ತು ಸಸ್ಯಗಳ ನಡುವೆ gene transfer ಆಗಿಲ್ಲ! ರಸಾಯನಿಕ ಗೊಬ್ಬರಗಳಿಂದ ಯಾವ ಹಾನಿಯೂ ಇಲ್ಲ. ಅದಕ್ಕೆ ನಮ್ಮ ಶರೀರ ಹೊಂದಿಕೊಳ್ಳುತ್ತದೆ ಎಂದು ನಮ್ಮ ಕಿವಿಯ ಮೇಲೆ ಹೂವಿಡಲು ನೋಡಿದರು. ಶರೀರ ಹೊಂದಿಕೊಳ್ಳುತ್ತದೆ ಎಂಬುದು ನಿಜ, ಹೊಂದಿಕೊಳ್ಳಲು ಹತ್ತಾರು ತಲೆಮಾರುಗಳು ಹೋಗಬೆಕು. ಅಷ್ಟರಲ್ಲಿ ಮನುಕುಲಕ್ಕೆ ಆಗಬಬೇಕಾದ ಹಾನಿ ಆಗಿಹೋಗಿರುತ್ತದೆ!
ಸುಮಾರು ಎರಡು ತಾಸುಗಳ ಕಾಲ ನಡೆದ ಸಂಭಾಷಣೆಯನ್ನು ಇಲ್ಲಿಡುವುದು ಕಷ್ಟ. ಕನಿಷ್ಟ ಸಾಮಾನ್ಯ ಜ್ಞಾನ ಇರುವ ಯಾರಿಗಾದರೂ ಮೇಲಿನ ಅಂಶಗಳು ಅರ್ಥವಾಗುತ್ತವೆ. ಇದಕ್ಕೆ ಸಾಕ್ಷಿ ಬೇರೆ ಬೇಕು ಅಂತ ಕೇಳುತ್ತಾರೆ. ಹಾಳಾಗಿ ಹೋಗಲಿ ಎಂದು ಸಾಕ್ಷಿಗಳನ್ನು ಮುಂದಿಟ್ಟರೂ ಒಪ್ಪಲು ಕೆಲ ಮೂರ್ಖರು ತಯಾರಿರುವುದಿಲ್ಲ. ಅಮೇರಿಕ ಎಂದರೆ ಸಾಚಾತನದ ಪಳೆಯುಳಿಕೆ ಎಂಬಂತೆ ವರ್ತಿಸುವ ವಿತಂಡರಿಗೆ ಏನು ಹೇಳಲಾದೀತು?
ಬುಧವಾರ ೧೧ ನವೆಂಬರ್ ೨೦೦೯
ಭೂರಮೆಯು ಬಸಿರಾಗಿ
ಸರಸಾಟಕೆ ತಾ ಕರೆವ.
ಭೋರ್ಗರಿಸಿ ಆರ್ಭಟಿಸಿ
ಪ್ರೀತಿಯ ಸೋನೆಯಗರೆವ.
ಭೂದೇವಿ ನಾಚಿ ಕೆಂಪಾಗಿ
ನದಿತೊರೆಗಳಲಿ ಮೇಲುಕ್ಕಿ
ಮಳೆರಾಯನ ರೇತದಲಿ
ಇಳೆಯೊಡಲು ಬಸಿರಾಗಿ
ಎಲ್ಲೆಲ್ಲೂ ಹಸಿರುಕ್ಕಿ
ಭೂಮಕ್ಕಳ ಪಾಲಿಸಿ ಫಲಿಸಿ
ಜೀವಕೆ ಕಳೆ ಮುತ್ತಿಕ್ಕಿ
ಜಗದೊಳಗೆ ಸಂಚಯವಾಗಿ
ಬುಧವಾರ ೨೬ ಆಗಸ್ಟ್ ೨೦೦೯
'ಮೊಕ್ಷಕೆರಡಕ್ಷರ' ಯಾವುದು ಗೊತ್ತಾ ?
ಅಕ್ಷರವು ಲೇಖಕ್ಕೆ ತರ್ಕ ತಾ ವಾದಕ್ಕೆ
ಮಿಕ್ಕ ಓದುಗಳು ತಿರುಪೆಗೆ
ಮೊಕ್ಷಕೆರಡಕ್ಷರವೇ ಸಾಕು ಸರ್ವಜ್ಞ ;
ಪ್ರವಾಸಿ ಮಂದಿರದ ಗೋಡೆಯ ಮೇಲಿದ್ದ ವಚನ ಓದುತ್ತಿದ್ದೆ.
ನನಗಿಂತ ಎರಡು ವರ್ಷ ಕಿರಿಯ ಸಹೋದ್ಯೋಗಿ ಬಂದು "ಹರ್ಷಣ್ಣ 'ಮೊಕ್ಷಕೆರಡಕ್ಷರ' ಯಾವುದು ಹೇಳಿ ನೋಡೋಣ ?" ಅಂದ.
" ಇನ್ಯಾವುದು ' ಮೊ .ಕ್ಷ ' ಎರಡಕ್ಷರ ಆಯ್ತಲ್ಲಾ ?" ಅಂದೆ.
"ಅಲ್ಲ " ಅಂದ.
"ಯೋಗ ?"
"ಅಲ್ಲ "
" ಧ್ಯಾನ ?"
"ಅಲ್ಲ "
" ಸತ್ಯ?"
"ಅಲ್ಲ "
" ಜ್ಞಾನ ?"
"ಅಲ್ಲ "
" ಕರ್ಮ ?"
"ಅಲ್ಲ "
" ಭಕ್ತಿ ?"
"ಅಲ್ಲ "
" ತಪ ?"
"ಅಲ್ಲ "
" ವೇದ ?"
"ಅಲ್ಲ "
" ಶಿವ ?"
"ಅಲ್ಲ "
" ಕೃಷ್ಣ ?"
"ಅಲ್ಲ "
" ರಾಮ ?"
"ಅಲ್ಲ "
" ಗುರು ?"
"ಅಲ್ಲ "
" ಮಣ್ಣು ?"
"ಅಲ್ಲ "
" ದಾನ ?"
"ಅಲ್ಲ "
" ದಯೆ ?"
"ಅಲ್ಲ "
" ಮನ ?"
"ಅಲ್ಲ "
" ಪೂಜೆ ?"
"ಅಲ್ಲ "
" ಜಪ ?"
"ಅಲ್ಲ "
"ಗೊತ್ತಾಗಲಿಲ್ಲ ಹೇಳಪ್ಪ !"
"ಹಳೆ ಕಾಲದಲ್ಲಿ ಇದ್ದೀರಲ್ಲ ಹರ್ಷಣ್ಣ ! ಕಾಲದ ಜೊತೆ ಅಪಡೆಟ್ ಆಗ್ತಿರಬೇಕು !ಎರಡಕ್ಷರ ಯಾವ್ದು ಗೊತ್ತಾ? "
" ವಿಸ್ಕಿ, ರಮ್, ವೋಡ್ಕಾ, ಸ್ಕಾಚ್, ಬ್ರಾಂಡಿ, ವೈನ್, ನೀರಾ, ಬೀಡಿ, ಗಾಂಜಾ..ಹ್ಹೆ...ಹ್ಹೆ...ಹ್ಹೆ.... ಎಲ್ಲಾ ಎರಡಕ್ಷರ ! "
"ಇದ್ರಿಂದ ಮೋಕ್ಷ ಸಿಗೋದು ನಮಗಲ್ಲಪ್ಪಾ ಬಾಟಲಿಗಳಿಗೆ! ಬಾಟಲಿಯೋಳಗಿನ 'ಮತ್ತು' ಖಾಲಿಯಾಗುತ್ತದೆ . ನಿನಗೆ ಮೋಕ್ಷ ಸಿಗಬೇಕು ಅಂದ್ರೆ ನಿನ್ನೊಳಗಿನ 'ಮತ್ತು' ಖಾಲಿಯಾಗಬೇಕು!"
ಸೋಮವಾರ ೧೦ ಆಗಸ್ಟ್ ೨೦೦೯
ಅದನ್ನೂ ದೇವರು ಎಂದು ಕರೆದುಬಿಟ್ಟರೆ ????
ಅವರಿಗೆ ತಕ್ಷಣ ಗುರುತಾದಂತೆ ಕಾಣಲಿಲ್ಲ. "ಎಲ್ಲಿ ಸಿಕ್ಕಿದ್ದೆವು ಅಂತ ನೆನಪಾಗಲಿಲ್ಲ" ಎಂದರು.
"ಎರಡು ವರ್ಷದ ಹಿಂದೆ ಕೂಡಲಸಂಗಮದಲ್ಲಿ ವಿಜ್ಞಾನ ಲೇಖಕರ ಶಿಬಿರದಲ್ಲಿ ಸರ್.. ಪದೇ ಪದೇ ದೇವರನ್ನು ಎಳೆತಂದು ಚರ್ಚೆಯ ದಾರಿ ತಪ್ಪಿಸುತ್ತಿದ್ದೆನಲ್ಲ..ನಾನೇ" ಎಂದೆ.
"ಓಹ್ ..ದಾವಣಗೆರೆಯವರಲ್ಲವೇ ನೀವು? ಸಂತೋಷ!" ಕುಶಲೋಪರಿ ಮುಂದೆ ಸಾಗಿತು. ನೆನಪು ಎರಡು ವರ್ಷಗಳ ಹಿಂದಕ್ಕೋಡಿತು.
ಈ ಸಮಾವೇಶದಲ್ಲಿ ನಾಸ್ತಿಕವಾದಕ್ಕೆ ವಿಶೇಷ ಮಹತ್ವವಿತ್ತು. ದೇವರನ್ನು ಹಿಗ್ಗಾಮುಗ್ಗಾ ಬೈಯುವುದು "ಹಿಡನ್ ಅಜೆಂಡಾ" ಗಳಲ್ಲೊಂದು ಎನ್ನಬಹುದು. ನನಗೆ ನಿರೀಶ್ವರವಾದಿಗಳನ್ನು, ಕಮ್ಯುನಿಷ್ಟರನ್ನು ಮಾತನಾಡಿಸಿ ಅಣಕಿಸುವುದರಲ್ಲಿ ಭಲೇ ಮಜಾ ಬರುತ್ತದೆ. ಇದಕ್ಕಾಗಿಯೇ ಮೈಸೂರು, ಬೆಂಗಳೂರುಗಳಲ್ಲಿ ಎಸ್.ಯು.ಸಿ.ಐ ಕಚೇರಿಗಳಿಗೆ ಹೋಗಿದ್ದೇನೆ. ಬಸ್ ಸ್ಟಾಂಡ್ ಗಳಲ್ಲಿ ಡಬ್ಬಿ ಹಿಡಿದು ಹಣ ಕೇಳಲು ನಿಲ್ಲುವ ಹುಡುಗರನ್ನು ಮಾತನಾಡಿಸಿದ್ದೆನೆ. ಯಾವುದಾದರೂ ಮೇಳದಲ್ಲಿ ಇವರ ಮಳಿಗೆಯನ್ನು ಕಂಡರೆ ಅತ್ಯಂತ ಸಂಭ್ರಮದಿಂದ ಕಿಚಾಯಿಸಲು ಹೋಗುತ್ತೇನೆ. ಅವರ ಬಗೆಗಿನ ಜೋಕುಗಳನ್ನು ಹೇಳಿ ಅವರು ಸಿಟ್ಟಾಗಿ ಮುಖ ಕೆಂಪು ಮಾಡಿಕೊಳ್ಳುವುದನ್ನು ನೋಡುವುದೆಂದರೆ ನನಗೆ ಬಹಳ ಖುಷಿ.
ಈ ಶಿಬಿರದಲ್ಲಿದ್ದ ಅತ್ಯಂತ ಕಿರಿಯ ವಯಸ್ಸಿನ ಮತ್ತು ಅತ್ಯಂತ ಉದ್ಧಟ ಸದಸ್ಯ ನಾನು. ಬೇಕೆಂದೇ ಗೋಷ್ಟಿಗಳಿಗೆ ಹೋಗುವಾಗ ಹಣೆಗೆ ಢಾಳಾಗಿ ವಿಭೂತಿ ಬಳಿದುಕೊಂಡು ಹೋಗುತ್ತಿದ್ದೆ. ಸಮ್ಮೇಳನದ ಕಡೆಯ ದಿನ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಅತಿಥಿಗಳಾಗಿ ಆಗಮಿಸಿದ್ದರು. ಇವರು ನಿಜಕ್ಕೂ ಮೇಧಾವಿಗಳು. ಭೌತಶಾಸ್ತ್ರದ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡಕ್ಕೆ ಅನುವಾದಿಸಿದ್ದಾರೆ. ವೇದಿಕೆಯ ಮೇಲೆ ಮಾತನಾಡುತ್ತಾ "ವಿಜ್ಞಾನ ಎಂದರೆ ಜನರಿಗೆ ಸತ್ಯವನ್ನು ತೋರಿಸುವುದು. ವಿಜ್ಞಾನವೇ ಸತ್ಯ." ಎಂದರು.
ಪ್ರಶ್ನೋತ್ತರ ಕಾರ್ಯಕ್ರಮ ಮೊದಲಾಯಿತು. ಅನೇಕರು ಪ್ರಶ್ನೆಗಳನ್ನು ಕೇಳಿ ತಮ್ಮ ಜ್ಞಾನದಾಹವನ್ನು ತೃಪ್ತಿ ಪಡಿಸಿಕೊಂಡರು. ಕಡೆಗೆ ತಲೆಹರಟೆ ಮಾಡಲು ನಾನು ಎದ್ದೆ. ಚಿಕ್ಕ ಸಂಭಾಷಣೆ ನಡೆಯಿತು.
"ವಿಜ್ಞಾನವೇ ಸತ್ಯ ಎಂದಿರಲ್ಲ. ಹಾಗೆಂದರೇನು?"
"ವಿಜ್ಞಾನ ಜನರಲ್ಲಿನ ಅಜ್ಞಾನವನ್ನು ಹೋಗಲಾಡಿಸುತ್ತದೆ. ತಮ್ಮ ಸಂಶೊಧನೆಗಳಿಂದ ವಿಜ್ಞಾನಿಗಳು ಸತ್ಯವನ್ನು ಜನರಿಗೆ ತಿಳಿಸುತ್ತಾರೆ"
"ಭೊರ್ ಹೇಳಿದ್ದನ್ನೆ ರುದರ್ಫರ್ಡ್ ಅಲ್ಲಗಳೆದರು, ನ್ಯೂಟನ್ ಹೇಳ್ದಿದ್ದನ್ನ ಐಸೆನ್ಬರ್ಗ್ ಅಲ್ಲಗಳೆದರು. ಹಾಗಾದರೆ ಸತ್ಯ ಕಾಲಕಾಲಕ್ಕೆ ಬದಲಾಗುತ್ತಾ? ಕಾಲಕಾಲಕ್ಕೆ ಬದಲಾದರೆ ಅದನ್ನು ಸತ್ಯ ಎನ್ನಬಹುದಾ?"
"ಅದು ಹಾಗಲ್ಲ. ಆಯಾ ಸಮಯಕ್ಕೆ ಅದು ಸರಿಯಾದರೆ ಅದು ಸತ್ಯ. ವಿಜ್ಞಾನ ಸತ್ಯದ ಸಮೀಪಕ್ಕೆ ನಮ್ಮನ್ನು ಕರೆದೊಯ್ಯುತ್ತದೆ."
"ಹೇಗೆ? ಬೈನರಿ ಸರ್ಚ್ ಮಾಡಿದ ಹಾಗೆ ಸುಳ್ಳನ್ನು ನಿರಾಕರಿಸುತ್ತಾ ಹೋಗುವುದಾ? ಅಥವಾ ಹೊಸದನ್ನು ಹುಡುಕಿಕೊಂಡು ಹೋಗುವುದಾ?"
"ಎರಡೂ ಆಗಬಹುದು. ಉದಾಹರಣೆಗೆ ಈಗ ವಿಜ್ಞಾನಿಗಳು ಹೊಸ ಸಂಶೋಧನೆ ಕೈಗೊಂಡಿದ್ದಾರೆ. ಜಗತ್ತಿನ ಎಲ್ಲಾ ಶಕ್ತಿಗಳಿಗೂ ಒಂದೇ ಶಕ್ತಿಯೇ ಮೂಲವಾಗಿದೆ. ಅದೇ ಶಕ್ತಿಯೇ ಅಣುಶಕ್ತಿಯಲ್ಲಿರುವುದು. ಅದೇ ಶಕ್ತಿಯೇ ಬೆಳೆಯುವ ಹುಲ್ಲಿನಲ್ಲಿರುವುದು. ಬಹುತೇಕ ಯಶಸ್ವಿಯಾಗುವ ಹಂತಕ್ಕೆ ಬಂದಿದೆ ಅದು."
"ಅಕಸ್ಮಾತ್ ಬಿಲಿಯಾಂತರ ಹಣ ಖರ್ಚು ಮಾಡಿ ಕಂಡುಕೊಂಡ ಆ ಶಕ್ತಿಗೆ ವಿಜ್ಞಾನಿಗಳು ’ದೇವರು’ ಅಂತ ಹೆಸರಿಟ್ಟರೆ ಏನು ಮಾಡೋದು?" ಎಂದುಬಿಟ್ಟೆ.
ಮಾಜಿ ಉಪಕುಲಪತಿಗಳು ಇರಿಸುಮುರುಸುಗೊಂಡರು. ಅವರ ಮೊಗದ ಮೇಲೆ ಅಸಹನೆ ಸ್ಪಷ್ಟವಾಗಿ ಕಂಡಿತು.
ಪಕ್ಕದಲ್ಲೇ ಕುಳಿತಿದ್ದ ಸಭಾಧ್ಯಕ್ಷರು "ಒಳ್ಳೆಯ ಚರ್ಚೆ ನಡೆಯುತ್ತಿತ್ತು ನೀವು ಚರ್ಚೆಯ ಹಾದಿ ತಪ್ಪಿಸಿದಿರಿ" ಎಂದು ಸಿಡಿಮಿಡಿಗೊಂಡರು.
ನಾನು ವಿಜಯೋತ್ಸಾಹದಲ್ಲಿ ಕುರ್ಚಿಯ ಮೇಲೆ ಕುಳಿತೆ.
ನಂತರ ಅನೇಕರು ಬಂದು " ಅವರು ನಿಮಗೆ ಉತ್ತರ ಕೊಡಲಿಲ್ಲ ಅಲ್ಲವೇ? ಆ ಪ್ರಶ್ನೆಗೆ ಉತ್ತರ ಇದೆಯೇ ?" ಎಂದು ಕೇಳಿದರು. ನಿಜ ಹೇಳಬೇಕೆಂದರೆ ನನ್ನಲ್ಲೂ ಉತ್ತರ ಇರಲಿಲ್ಲ. ಆ ಕ್ಷಣದಲ್ಲಿ ನಾನು ಮೇಧಾವಿಗಳನ್ನು ತಬ್ಬಿಬ್ಬು ಮಾಡಿದೆ ಎಂಬ ಹೆಮ್ಮೆ ಇತ್ತಾದರೂ ನಂತರ ಅಂತಹ ಹಿರಿಯರ ಎದುರಿಗೆ ಅಷ್ಟು ಉದ್ಧಟತನದಿಂದ ವರ್ತಿಸಬಾರದಿತ್ತು ಎನಿಸಿತು.
ವಿಜ್ಞಾನಕ್ಕೆ ದೇವರು ನಿಲುಕುತ್ತದೆ ಎಂಬುದರ ಬಗ್ಗೆ ನನಗೆ ನಂಬಿಕೆ ಇಲ್ಲ. ಆದರೆ ನಾಸ್ತಿಕನಾಗಿದ್ದ ನನ್ನನ್ನು ದೇವರೆಡೆಗೆ ಹೊರಳಿಸಿದ್ದೇ ವಿಜ್ಞಾನ ಎಂಬುದಂತೂ ಸತ್ಯ. (ಇದರೆ ಬಗ್ಗೆ ಮತ್ತೆಂದಾದರೂ ಬರೆಯುತ್ತೇನೆ.)
ಶುಕ್ರವಾರ ೨೪ ಜುಲೈ ೨೦೦೯
ಮಿನಿ ಮಿನಿ ಕಥೆಗಳು....!!!!
ಛೆ! ಎಂಥ ಕುರೂಪಿ ಹುಡುಗಿ ಇವಳು! ಹಲ್ಲುಬ್ಬು. ಅಲ್ಲಿನ ಮೇಲೆಲ್ಲ ಹಳದಿ ಕಲೆಗಳು. ಎಣ್ಣೆಗೆಂಪು ಬಣ್ಣ. ಮೋಟುಜಡೆ. ಹಲ್ಲಿನ ನಡುವೆ ಬಸ್ಸು ಹೋಗುವಷ್ಟು ಅಗಲ ಕಿಂಡಿಗಳು. ಯಾವ ಮೂಡಿನಲ್ಲಿದ್ದನೋ ಪರಮಾತ್ಮ ಇವಳನ್ನು ನಿರ್ಮಿಸುವಾಗ!
ಮದುವೆ ಮನೆ. ಅಸ್ತಮಾ ಪೀಡಿತ ನಾಯಿಯಂತೆ ಸದ್ದು ಹೊರಡಿಸುತ್ತಾ ಒಬ್ಬ ಜೋರಾಗಿ ತೇಕತೊಡಗಿದ. ಬಾಯಿಯಿಂದ ನೊರೆ ಉಕ್ಕತೊಡಗಿತು. ಅವನ ತಲೆ ಜೋರಾಗಿ ಮಧ್ಯಕ್ಕೂ ಬಲಕ್ಕೂ ತೊಯ್ದಾಡತೊಡಗಿತು. ನಮ್ಮ ಕುರೂಪಿ ಹುಡುಗಿ ಓಡಿ ಬಂದಳು. ಅವನು ಆಕೆಯ ಗಂಡ! ಯಾರೋ ಕೀಗೊಂಚಲು ಕೊಟ್ಟರು. ಕೀಗೊಂಚಲನ್ನು ಅವನ ಕೈಯಲ್ಲಿಟ್ಟು ಇನೊಂದು ಕೈಯಾಲ್ಲಿ ತೋಳನ್ನು ಬಿಗಿಯಾಗಿ ಹಿಡಿದು ಸಂತೈಸತೊಡಗಿದಳು. ಚಪ್ಪಲಿ ಬಿಚ್ಚಿ ತೆಗೆದು ಅಂಗಾಲನ್ನು ತಿಕ್ಕತೊಡಗಿದಳು. ಅವನು ನಿಧಾನವಾಗಿ ಚೇತರಿಸಿಕೊಳ್ಳತೊಡಗಿದ. ಪ್ರಜ್ಞೆ ಮರುಕಳಿಸಿದಂತೆ ಹುಚ್ಚು ಹಿಡಿದವನಂತೆ ಆಡತೊಡಗಿದ. ಚಪ್ಪಲಿ ತೆಗೆದಿದ್ದಕ್ಕೆ ಅವಳ ಮೇಲೆ ರೇಗಿದ. ಅವನು ದೂಕಿದ ಜೋರಿಗೆ ಆಕೆ ಎರಡು ಮಾರಾಚೆ ಹೋಗಿ ಬಿದ್ದಳು. ನಿಧಾನವಾಗಿ ಹಸನ್ಮುಖಿಯಾಗಿ ಎದ್ದು ಬಂದಳು. ಚಪ್ಪಲಿ ತೊಡಿಸಲು ಮುಂದಾದಳು. ಅವಳ ಕಪಾಳಕ್ಕೆ ಹೊಡೆದು ಝಾಡಿಸಿ ಸೊಂಟಕ್ಕೆ ಒದ್ದ. ಈ ಬಾರಿ ನಾಕು ಮಾರು ದೂರಕ್ಕೆ ಬಿದ್ದಳು. ಅವಳ ದೇಹ ಬಡಿದ ರಭಸಕ್ಕೆ ಕುರ್ಚಿಗಳು ಚೆದುರಿ ಹೋದವು. ಅವಳ ಮುಖದ ಮುಗುಳ್ನಗು ಮಾಯವಾಗಲಿಲ್ಲ. ಚಿಮ್ಮಿದ ಕಣ್ಣೀರನ್ನು ಅಲ್ಲೇ ಅದುಮಿ ತೊರುಬೆರಳಿಂದ ಒರೆಸಿಕೊಂಡು ಗಂಡನ ತೋಳು ಹಿಡಿದಳು. ನಗುಮುಖದಿಂದ ಸುತ್ತಲಿದ್ದವರಿಗೆ ಕ್ಷಮೆ ಕೇಳಿ ಕೋಣೆಯೆಡೆಗೆ ಗಂಡನನ್ನು ಕರೆದೊಯ್ದಳು.
ಇದ್ದಕ್ಕಿದ್ದಂತೆ ಆ ಹುಡುಗಿಯ ಮುಖದ ಮೇಲೆ ಸೌಂದರ್ಯ ನಳನಳಿಸತೊಡಗಿತು!
**************************************************************************************************************************************
ದೊಡ್ಡವರ ವಿಷಯ!
ಈ ಊರಿಗೆ ಹೊಸದಾಗಿ ಜಿಲ್ಲಾ ಮಟ್ಟದ ಗೆಝೆಟೆಡ್ ಅಧಿಕಾರಿ ವರ್ಗವಾಗಿ ಬಂದರು. ಅವರ ಗತ್ತು, ಗಾಂಭೀರ್ಯ ಹೆಸರುವಾಸಿಯಾಗಿದ್ದವು. ಈ ಹೊಸ ಆಫ಼ೀಸಿನ ಜವಾನನಿಗೆ ಇಪ್ಪತ್ತೇಳೋ ಇಪ್ಪತೆಂಟೋ ವರ್ಷದ ಅನುಭವ. ಇಲಾಖೆಯ ರಾಜಕೀಯ, ಕಾರ್ಯವೈಖರಿ, ದಕ್ಷತೆ ಇತ್ಯಾದಿಗಳ ಬಗ್ಗೆ ಚೆನ್ನಾಗಿ ಅರಿತವ. ನುರಿತವ! ಅಗಾಗ ಅಧಿಕಾರಿಗಳಿಗೆ ಕೆಲ ಸೂಕ್ಷ್ಮಗಳನ್ನು ತಿಳಿಸಲು ಯತ್ನಿಸುತ್ತಿದ್ದ. ಅವರಿಗೆ ರೇಗುತ್ತಿತ್ತು. "ನಿನ್ನ ಕೆಲಸ ನೀನು ನೋಡು" ಎಂದು ಗದರುತ್ತಿದ್ದರು. "ದೊಡ್ಡವರ ವಿಷಯ ನಿಂಗ್ಯಾಕೆ?" ಎಂದು ಅಬ್ಬರಿಸುತ್ತಿದ್ದರು. ಅನುಭವಿ ಜವಾನ ದೊಡ್ಡವರ ವಿಷಯದಲ್ಲಿ ತಲೆ ಹಾಕದಿರುವುದನ್ನು ಬಹಳ ಬೇಗ ಕಲಿತುಕೊಂಡ.
ಅಧಿಕಾರಿಗಳ ಮಗಳ ಮದುವೆ ಆ ಊರಿನ ಪ್ರಸಿದ್ಧ ಪತ್ರಿಕೆಯ ಸಂಪಾದಕರೊಂದಿಗೆ ನಿಶ್ಚಯವಾಯಿತು. ಸಂತಸ ಸಂಭ್ರಮಗಳಿಂದ ಸಿದ್ಧತೆಗಳು ಜರುಗತೊಡಗಿದವು. ಮದುವೆ ಇನ್ನೊಂದು ವಾರವಿದೆ ಎನ್ನುವಾಗ ಹಾರ್ಟ್ ಬ್ರೇಕಿಂಗ್ ನ್ಯೂಸ್ ಬಂತು. ಹುಡುಗ ಮೊದಲೇ ಪ್ರ್ಏಮಿಸಿ ಒಬ್ಬ ಹುಡುಗಿಯನ್ನು ಮದುವೆಯಾಗಿದ್ದ. ಒಂದು ಮಗುವೂ ಇತ್ತು. ತಮಗೆ ಇಷ್ಟ ಇಲ್ಲದ ಸೊಸೆಗೆ ಬಲವಂತವಾಗಿ ಮಗನಿಂದ ಡೈವರ್ಸ್ ಕೊಡಿಸಿ ವಿಷಯ ಮುಚ್ಚಿಟ್ಟು ಮದುವೆ ಮಾಡಲು ಹೊರಟಿದ್ದರು. ಹುಡುಗನಿಗೆ ಈ ಮದುವೆ ಇಷ್ಟವೇ ಇರಲಿಲ್ಲ. ಮದುವೆ ಮುರಿಯಿತು.
ಖಿನ್ನರಾಗಿ ಅಫ಼ೀಸಿನ ಖುರ್ಚಿಯ ಮೇಲೆ ಕುಳಿತ ಅಧಿಕಾರಿ ಗೊಣಗಿದರು. "ಆ ಹುಡುಗನಿಗೆ ಮೊದಲೇ ಮದುವೆ ಆಗಿತ್ತಂತೆ! ಮೋಸ ಮಾಡಿಬಿಟ್ಟರು. ನಿಂಗೆ ಅವರ ಬಗ್ಗೆ ಗೊತ್ತಾ?" ಅಂತ ಜವಾನನನ್ನು ಕೇಳಿದರು.
"ಹೌದು ಸರ್! ಆ ಹುಡುಗಿ ನಮ್ಮೂರಿನವಳು. ಪಾಪಿಗಳು ದೂರ ಮಾಡಿಬಿಟ್ಟರು. ಅದೇ ಕೊರಗನ್ನು ಹಚ್ಚಿಕೊಂಡು ಅವನು ದಿನಾ ಕುಡೀತಾನೆ."
"ಹೌದಾ? ಎಲ್ಲಾ ವಿಷಯ ಗೊತ್ತಿದ್ದೂ ಮೊದಲೇ ಯಾಕೆ ಹೇಳಲಿಲ್ಲ?"
"ದೊಡ್ಡವರ ವಿಷಯ ನನಗ್ಯಾಕೆ ಅಂತ ಸುಮ್ಮನಿದ್ದೆ ಸರ್!" ಅಂದ ಜವಾನ ವಿನಯದಿಂದ!
*************************************************************************************************************************************
ನಾನೂ ಹೊಸಬ
"ಶ್ರೀ ಗುರುಬಸವೇಶ್ವರ ಕಲ್ಯಾಣ ಮಂಟಪ" ಎಂದು ಕಟ್ಟಡದ ಹಣೆಯ ಮೇಲೆ ದೊಡ್ಡದಾಗಿ ಬರೆದಿದ್ದ ಹೆಸರನ್ನು ಓದುತ್ತಿದ್ದೆ. ಪಕ್ಕದಲ್ಲಿ ಬಂದು ನಿಂತ ಧುಡೂತಿ ಹೆಂಗಸು "ಶ್ರೀ ಗುರುಬಸವೇಶ್ವರ ಕಲ್ಯಾಣ ಮಂಟಪ" ಎಂದು ಜೋರಾಗಿ ಓದಿದಳು. ಕಟ್ಟಡದ ಕಡೆ ಬೊಟ್ಟು ಮಾಡಿ ತೋರಿಸುತ್ತಾ ನನ್ನನ್ನುದ್ದೇಶಿಸಿ "ಹಲೋ,.. ಇದು ಕಲ್ಯಾಣ ಮಂಟಪಾನಾ?" ಅಂತ ಕೇಳಿದಳು.
"ಗೊತ್ತಿಲ್ಲ. ನಾನೂ ಈ ಊರಿಗೆ ಹೊಸಬ" ಎಂದು ಹೇಳಿ ಬೆನ್ನು ತಿರುಗಿಸಿ ನಡೆದೆ.
********************************************************************************************************************************
ಹೆತ್ತವರ್ಯಾರು?
ಅರ್ಜಿಯಲ್ಲಿ "ಹೆತ್ತವರ ಸಹಿ" ಎಂಬಲ್ಲಿ ಸಹಿ ಮಾಡಲು ಹೊರಟ ತಂದೆಯನ್ನು ತಡೆದ ಮುದ್ದಿನ ಮಗಳು
"ನನ್ನನ್ನು ಹೆತ್ತದ್ದು ಅಮ್ಮ. ನೀನೇಕೆ ಸಹಿಮಾಡುತ್ತೀಯಾ?" ಎಂದು ಕೇಳಿದಳು ಮುದ್ದಾದ ಪದಗಳಲ್ಲಿ.
**************************************************************************************************************************
ಕಾಸಿಗೆ ತಕ್ಕ ಕಜ್ಜಾಯ.
ಹುಡುಗಿಯನ್ನು ನೋಡಲು ಬಂದವರು ಸಣ್ಣಗೆ ಮೂಗು ಮುರಿದರು.
"ಹುಡುಗಿಯ ಕಣ್ಣು ಸಲ್ಪ ಮೆಳ್ಳೆ" ಎಂದಳು ತಾಯಿ.
"ಹುಡುಗಿಯ ಪಾದ ಫ಼್ಲಾಟು. ಒಳ್ಳೆದಾಗಲ್ಲ" ಎಂದರು ಪುರೋಹಿತರು.
"ದನಿ ಸಲ್ಪ ಗೊಗ್ಗರು" ಎಂದಳು ತಂಗಿ.
"ಹುಡುಗಿ ಅಣ್ಣ ರೌಡಿ ಥರ ಕಾಣ್ತಾನೆ" ಎಂದ ಹುಡುಗನ ಮಾವ.
ಒಂದೊಂದು ಲಕ್ಷಕ್ಕೊಂದರಂತೆ ಹುಡುಗಿಯ ಐಬುಗಳನ್ನು ಮುಚ್ಚಲಾಯಿತು. ಮದುವೆ ಸಾಂಗೊಪಸಾಂಗವಾಗಿ ನೆರವೇರಿತು.
******************************************************************************************************************
ದೀಪದ ಕೆಳಗೆ....
ಪಿ.ಟಿ ಮೇಷ್ಟ್ರು ಹುಡುಗರಿಗೆ ಬೈಯುತ್ತಿದ್ದರು. "ನಿಮ್ಮಲ್ಲಿ ಸಂಸ್ಕಾರ ಇಲ್ಲ ಕಣ್ರಯ್ಯ! ನಿಮ್ಮಪ್ಪ ಅಮ್ಮ ಏನು ಹೇಳಿಕೊಟ್ಟಿದ್ದಾರೆ ನಿಮಗೆ. ಮಾತು ಮಾತಿಗೆ ’ಲೇ’ ಅಂತೀರಾ. ’ಹೋಗ್ರಲೇ... ಬರ್ರಲೇ’ ಛೆ! ಕೇಳಲಿಕ್ಕೇ ಎಂಥ ಅಸಹ್ಯ!"
ಅದೇ ಸಂಜೆ ಐದೋ ಆರು ವರ್ಷದ ಹುಡುಗನೊಬ್ಬ ತನಗಿಂತ ಎತ್ತರದ ಬ್ಯಾಟನ್ನು ಹಿಡಿದು ಕ್ರಿಕೆಟ್ ಆಡುತ್ತಿದ್ದ. ಬಾಲೆಸೆಯುವ ಹುಡುಗ ನಿಧಾನವಾಗಿ ಚೆಂಡನ್ನು ಎಸೆಯುತ್ತಿದ್ದ. ಎತ್ತರದ ಬ್ಯಾಟನ್ನು ಎತ್ತಿ ಹೊಡೆಯಲಾಗದೇ ಹುಡುಗ ಸೋಲುತ್ತಿದ್ದ. ಚೆಂಡೆಸೆಯುವನನ್ನು ಹಿಗ್ಗಾಮುಗ್ಗಾ ಬೈಯುತ್ತಿದ್ದ. "ಲೇ..ಲೇ ಹಲ್ಕಟ್... ನೆಟ್ಟಗೆ ಬಾಲ್ ಹಾಕೊಕಾಗಲ್ವೇನಲೇ ....ಸುವ್ವರ್.."
ಅಲ್ಲಿಗೆ ಪಿ.ಟಿ. ಮೇಷ್ಟ್ರು ಬಂದರು. ಕೈಲಿದ್ದ ಬ್ಯಾಟನ್ನು ಎಸೆದ ಹುಡುಗ "ಅಪ್ಪಾ" ಎಂದು ಓಡಿ ಹೋಗಿ ಮೇಷ್ಟ್ರ ಮಡಿಲನ್ನೇರಿದ. ಮಗನನ್ನೆತ್ತಿಕೊಂಡ ಮೇಷ್ಟ್ರು ಕೆನ್ನೆಗೆ ಹಣೆಗೆ ಲೊಚಲೊಚನೆ ಮುತ್ತಿಟ್ಟರು!
***********************************************************************************************************************************
ಮದುವೆ ಸ್ವರ್ಗದಲ್ಲಿ...
"ಮದುವೆ ಸ್ವರ್ಗದಲ್ಲಿ ಫ಼ಿಕ್ಸ್ ಆಗುತ್ತಂತೆ" ಎಂದಳು ಹೆಂಡತಿ.
"ಹೌದು, ಆದರೆ ನಂತರದ ಬದುಕು ನಡೆಯೋದು ಮಾತ್ರ ನರಕದಲ್ಲಿ" ಎಂದ ಗಂಡ.
********************************************************************************************************************
ಶತ್ರು ಹಿಂಜರಿದಾಗ.
ಬೆನ್ನಟ್ಟಿ ಬಂದ ಹುಲಿಯನ್ನು ಗುರುಗುಟ್ಟಿ ನೋಡಿತು ಜಿಂಕೆ.
ಹುಲಿ ಎರಡು ಹೆಜ್ಜೆ ಹಿಂದೆ ಸರಿಯಿತು. ತನಗೆ ಹೆದರಿಕೊಂಡು ಹಿಂದೆ ಸರಿದ ಹುಲಿಯ ಕಂಡು ಬೀಗಿತು ಜಿಂಕೆ ಮನದೊಳಗೆ.
ಮರುಕ್ಷಣದಲ್ಲಿಯೇ ಜಿಂಕೆಯ ಕತ್ತು ಹಿಡಿದು ಕೊಂದು ಹಾಕಿತು ಹುಲಿ.
ಮರೆಯಿಂದ ನೋಡುತ್ತಿದ್ದ ಹಿರಿಯ ಜಿಂಕೆ ಉಸುರಿತು. "ಹೆಚ್ಚಿನ ವೇಗ ಪಡೆಯಲು ಹುಲಿ ಹಿಂದೆ ಸರಿಯುತ್ತದೆ ಅಂತ ಆ ಜಂಬಗಾರನಿಗೆ ಗೊತ್ತೇ ಆಗಲಿಲ್ಲ."